30 December 2019

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +919449587244


2009ರಲ್ಲಿ ಸ್ಥಾಪಿತವಾದ ಯಕ್ಷಮಿತ್ರ ಟೊರೋಂಟೋ  ಯಕ್ಷಗಾನ ಶಿಕ್ಷಣ-ಲಕ್ಷಣ ಎಂಬ ಹೊಸ್ತೋಟ ಭಾಗವತರ  ೫೦ ವರ್ಷದ ಸಾಧನೆಯ ಸಾರವನ್ನು  ಸಂಪಾದಿಸಿ ಮುದ್ರಿಸಿ ಪ್ರಕಟಿಸಿದೆ.  ಯಕ್ಷಮಿತ್ರದ ಮೊದಲ ಪ್ರಕಟಣೆಯನ್ನು ತೀವ್ರವಾಗಿ ಅಸ್ವಸ್ಠವಾಗಿರುವ ಹೊಸ್ಟೊಟದವರು ಶಿರಸಿ ಸಮೀಪದ ಕೆರೆಕೊಪ್ಪದಲ್ಲಿ ಹಾಸಿಗೆಯಿಂದಲೇ ನೋಡಿ ಅಭಿನಂದಿಸಿದರು. ಯಕ್ಷಮಿತ್ರ ಡಿಸೆಂಬರ್ ೬ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಸಾಹಿತಿ ಸುಬ್ರಾಯ ಹೆಗಡೆ ಮತ್ತು ಪ್ರಮೋದ್ ಹೆಗಡೆ ಸುಮಾರು ೮೦ ಹೊಸ್ತೋಟ ಅಭಿಮಾನಿಗಳ ಎದುರು ಪುಸ್ತಕ ಬಿಡುಗಡೆ ಮಾಡಿದರು. ಕಲಾವಿದರಾದ ಸತೀಶ್ ದಂಟಕಲ್, ತಿಮ್ಮಪ್ಪ ಬಾಳೆಹದ್ದ, ಕೃಷ್ಣಯಾಜಿ ಇಡಗುಂಜಿ,  ಶಂಕರ ಭಾಗವತ ಯಲ್ಲಾಪುರ ಇತರರು ತಾವಾಗಿಯೇ ಬೇರೆ ಕೆಲಸ ಬದಿಗೊತ್ತಿ ಬಂದು ಗಣಪತಿ ಪೂಜೆ ಮಂಗಳ ಮತ್ತು ಹೊಸ್ಟೋಟರ ಕೆಲವು ಪದ್ಯ ಹಾಡಿ ಗುರು ಹೊಸ್ಟೋಟರಿಗೆ ಗೌರವ ಸಲ್ಲಿಸಿದರು.  ಮೂಲತಹ ಈ ವಿಷಯ ಸಂಗ್ರಹಿಸಿದ ಹಂದಿಮೂಲೆ ಗಣಪತಿ ಹೆಗಡೆ, ಕೆ ವಿ ಹೆಗಡೆ, ಮೂರೂರು ಗಣೇಶ ಹೆಗಡೆ, ಹೆಜ್ಜೆ-ಗೆಜ್ಜೆ ಬಳಗದ ಅರುಣ ಮತ್ತು ಸೌಮ್ಯ ಅವರನ್ನು ನೆನೆದು ಕೃತಙ್ನತೆ ಹೇಳಲಾಯಿತು. ಪ್ರಭಾಕರ ಜೋಷಿ ಮುನ್ನುಡಿ, ರಾಗು ಕಟ್ಟಿನಕೆರೆ ಸಂಕಲನ-ಸಂಪಾದನ, ಯಕ್ಷಗಾನ ಆಕಾಡೆಮಿ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಮತ್ತು ರಾಘವ ನಂಬಿಯಾರ್ ಪುಸ್ತಕಕ್ಕೆ ಹಿನ್ನುಡಿ ಕೊಟ್ಟಿದ್ದಾರೆ. ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934, ಭಾರತ-ರವೀಂದ್ರ ಮುದ್ರಣಾಲಯ ಸಾಗರ ಮೋ: +919449587244.

ಹೊಸ್ತೋಟ ಮಂಜುನಾಥ ಭಾಗವತರು ೫೦ ವರ್ಷ ಕಲಿಸಿದ ಯಕ್ಷಗಾನ ಶಿಕ್ಷಣದ ಸಾರ ಸರ್ವಸ್ವ ಈ ಸಂಗ್ರಾಹ್ಯಾರ್ಹವಾದ ಗ್ರಂಥದಲ್ಲಿ ಪ್ರಕಟವಾಗುತ್ತಿದೆ. ಮದ್ದಲೆಯ ಹಳೆತು ಮತ್ತು ಹೊಸ ಹೊಳಹಿನ ಬಿಡ್ತಿಗೆಗಳು, ಪಟ್ಟು - ಪೆಟ್ಟನ್ನು ಹೊಸ್ತೋಟರು ಅಭ್ಯಾಸಕ್ಕೆ ಅನುವಾಗುವಂತೆ ದೊರಕಿಸಿದ್ದಾರೆ.  ಇದು ಹೊಸ್ತೋಟದವರ ಕ್ರಮವಷ್ಟೇ ಆಗಬಾರದೆಂದು ಅವರು ಯಕ್ಷಗಾನವನ್ನು ಭಾಷಿಕವಾಗಿ ಅಂದರೆ ಕಲೆಯ ವ್ಯಾಕರಣದ ರೂಪದಲ್ಲಿ ಕಲಿಯಲು ಬರುವಂತೆ, ಆಕೃತಿಯ ನಿಯಮಗಳು, ರಂಗ ರೇಖೆಗಳು, ಚಲನೆ ಇತ್ಯಾದಿಗಳನ್ನು ಚಿತ್ರ ಸಹಿತ ವಿವರಿಸಿದ್ದಾರೆ. ಲಯವನ್ನು ಲಯಗಣಿತದ ಮೂಲಕ ಕಲಿಸುವುದು ಹೊಸ್ತೋಟ ಭಾಗವತರ ವಿಶೇಷ. ಅದರ ಗತ್ತು-ಗೊತ್ತು ಈ ಪುಸ್ತಕದಲ್ಲಿದೆ. ಯಕ್ಷಗಾನ ಸಾಹಿತ್ಯದ ಮಟ್ಟು-ಗುಟ್ಟು ಮತ್ತು ಅವನ್ನು ಬಳಸುವ ವಿಧಾನ-ಛಂದಸ್ಸು ಇದರಲ್ಲಿ ಲಭ್ಯ. ೯೦ ಯಕ್ಷಗಾನದ ರಾಗಗಳನ್ನು ಸ್ವರ ಪ್ರಸ್ತಾರಿಸಿ ಗುರು ಮುಖೇನ ಕಲಿಯಲು ಅಭ್ಯಾಸಕ್ಕೆ, ನೆನಪಿಗೆ ನೀಡಲಾಗಿದೆ.  ಅರ್ಥಗಾರಿಕೆ ಹೇಗೆ ಔಚಿತ್ಯ ಹೇಗೆ ಎಂಬ ವಚನ ರಚನಾತಂತ್ರವೇ ಇಲ್ಲಿ ಅನಾವರಣಗೊಂಡಿದೆ. ಅಭಿನಯ-ಔಚಿತ್ಯವನ್ನು ಸೋದಾರಣ ಇಲ್ಲಿ ನೀಡಲಾಗಿದೆ. ಕೃಷ್ಣಯಾಜಿ ಇಡಗುಂಜಿ ಇವರು ಚಂಡೆಯ ವಿವರ ನುಡಿಸುವ ಕ್ರಮ ಇವೆಲ್ಲವನ್ನು ಈ ಗ್ರಂಥಕ್ಕಾಗಿ ಒದಗಿಸಿದ್ದಾರೆ. ಶಂಕರ ಭಾಗವತರು ಮತ್ತು ಅನಂತ ಪಾಠಕರು ಮದ್ದಲೆಯ ನುಡಿತ ಬಡಿತಗಳ ಬಿಂಬ ಒದಗಿಸಿದ್ದಾರೆ. ಒಟ್ಟಿನಲ್ಲಿ ಇದು ಆಹಾರ್ಯ ಹೊರತುಪಡಿಸಿ ಯಕ್ಷಗಾನದ ಇನ್ನೆಲ್ಲವನ್ನೂ ಅಧಿಕಾರಯುತವಾಗಿ ವಿವರಿಸುವ ಅದ್ಭುತ ಗ್ರಂಥ. ಇತ್ತೀಚೆಗೆ ದಶಮಾನೋತ್ಸವ ಆಚರಿಸಿದ ಭಾರತದ ಹೊರಗಿರುವ ಪ್ರಥಮ ಯಕ್ಷಗಾನ ಮೇಳ - ಯಕ್ಷಮಿತ್ರ ಟೊರಾಂಟೋ ಈ ಪುಸ್ತಕವನ್ನು ಸಂಪಾದಿಸಿ ಪ್ರಕಾಶಿಸುತ್ತಿದೆ. ಈ ಪುಸ್ತಕದಲ್ಲಿ ವಿವರಿಸಿದ ಪ್ರಾತ್ಯಕ್ಷಿಕೆಗಳ ವೀಡಿಯೋಗಳು ಕೆಲ ಕಾಲದನಂತರ www.yakshamitra.com/shikshana ಇಲ್ಲಿ ಲಭ್ಯವಾಗುತ್ತದೆ.

ಇವಿಷ್ಟೇ ಅಲ್ಲದೇ ಬೇರಾರಿಗೂ ನಿಲುಕದ ಹೊಸ್ತೋಟ ಮಂಜುನಾಥ ಭಾಗವತರ  ಯಕ್ಷಗಾನದ ಬಗೆಗಿನ ಒಳನೋಟ ಇಲ್ಲಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ೨೦೦ಕ್ಕೂ ಹೆಚ್ಚು ಪ್ರಸಂಗ ಬರೆದ ಈ ಕವಿ, ಛಂದಶಾಸ್ತ್ರಜ್ಞರೂ, ಯಕ್ಷಗಾನದ ಒಬ್ಬ ಶ್ರೇಷ್ಟ ಗುರುವೂ ಆದ ಹೊಸ್ತೋಟ ಮಂಜುನಾಥ ಭಾಗವತರು ತ್ರಿಶಾಸ್ತ್ರ ಪಂಡಿತರಾದ ಒಬ್ಬ ಋಷಿ: ಇದು ಋಷಿ ಸಂಹಿತೆ ಎಂದರೆ ಅತಿಶಯೋಕ್ತಿಯಲ್ಲ. ಕಟು ಚಿಕಿತ್ಸೆಯ ಖಗ್ಣ ಶಯ್ಯೆಯಲ್ಲಿರುವ ಈ ಹಿರಿ ಚೇತನ ನಮಗೆಲ್ಲ ಕೊಡುತ್ತಿರುವ ಬಿಡುತ್ತಿರುವ ಸಂಪತ್ತು-ಸಂಹಿತೆ ಯಕ್ಷಗಾನ ಶಿಕ್ಷಣ-ಲಕ್ಷಣ ಎಂಬ ಈ ಗ್ರಂಥ.

ಇತ್ತೀಚೆಗೆ ದಶಮಾನೋತ್ಸವ ಆಚರಿಸಿದ ಭಾರತದ ಹೊರಗಿರುವ ಪ್ರಥಮ ಯಕ್ಷಗಾನ ಮೇಳ - ಯಕ್ಷಮಿತ್ರ ಟೊರಾಂಟೋ ಈ ಪುಸ್ತಕವನ್ನು ಸಂಪಾದಿಸಿ ಪ್ರಕಾಶಿಸುತ್ತಿದೆ. ಎಲ್ಲವನ್ನೂ ಸಂಗ್ರಹಿಸಿ ಸಂಪಾದಿಸಿ ಮುದ್ರಿಸಲು ನಾಲ್ಕಾರು ವರ್ಷವೇ ಹಿಡಿದಿದೆ. ಸಮಗ್ರವಾಗಿ ಕಲೆಯನ್ನು ಸರಳವಾಗಿಯೂ ಆಳವಾಗಿಯೂ ಪ್ರಸ್ತುತಪಡಿಸುವ ಇಂತಹ ಪುಸ್ತಕಗಳು  ಪ್ರಕಟವಾಗುವುದು ವಿರಳ. ಆಸಕ್ತರು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾದ್ದು. ಯಕ್ಷಗಾನದ ವಿದ್ವಾಂಸರಾದ ಡಾ ಎಮ್ ಪ್ರಭಾಕರ ಜೋಷಿ  ಮುನ್ನುಡಿ ಬರೆದಿದ್ದಾರೆ. ಈ ರೀತಿ ಇನ್ನೂ ಅನೇಕ ವಿಶೇಷ ಹಸ್ತಪ್ರತಿಗಳು ಇದ್ದು ಅವನ್ನು ಪ್ರಕಟಿಸಲು ವಿದ್ಯಾಭಿಮಾನಿಗಳು ಮುಂದಾಗಬೇಕು.

--ರಾಗು ಕಟ್ಟಿನಕೆರೆ

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...